ಶೀರ್ಷಿಕೆ – ನಿದ್ದೆವೊಲು ಸಾವು
ಸದ್ದುಮಾಡದೆ ನೀನು ಜಗಕೆ ಬಂದವನಲ್ಲ ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು ಗದ್ದಲವ ಬಿಡಲು ಕಡೆದಿನವಾನುಮಾದೀತೇ ನಿದ್ದೆವೊಲು ಸಾವ ಪಡೆ – ಮಂಕುತಿಮ್ಮ|| 929 ||
ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ ಯಾರ ಭುಜಕಂ ನಿನ್ನ ಭಾರವಾಗಿಸದೆ ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ ಪಾರಗಾಣಿಸ ಬೇಡು – ಮಂಕುತಿಮ್ಮ|| 930 ||
ವೇದಾಂತವಾಕ್ಯಗಳ ನಮಕಾನುವಾಕಗಳ ಕೇದಾರಗೌಳ ಮಣಿರಂಗಾರಭಿಗಳ ನಾದಂಗಳಲಿ ಮನವ ಬೆರೆಸಿ ನೀನುತ್ಕ್ರಮಿಸೆ ಸಾಧನವೊ ಮುಕ್ತಿಗದು – ಮಂಕುತಿಮ್ಮ|| 931 ||
ಮೋಹನಾನಂದಭೈರವಿ ಶಂಕರಾಭರಣ ಶಾಹನ ಕುರಂಜಿ ಕೇದಾರ ಕಾಪಿಗಳ ಮೋಹಸರ್ವಸ್ವ ರಾಗಾಬ್ಧಿಯೋ ಬ್ರಹ್ಮ ಗಾಹಿಸದರೊಳಗೆ ನೀಂ – ಮಂಕುತಿಮ್ಮ|| 932 ||
ಕಷ್ಟ ಜೀವದ ಪಾಕ; ಕಷ್ಟ ಧರ್ಮ ವಿವೇಕ ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ಇಷ್ಟಷ್ಟು ನಿನ್ನೊಳ್ ಒಳತಿಳಿವಿಲ್ಲದಿರೆ ನಷ್ಟ ದೃಷ್ಟಿ ಸೂಕ್ಷ್ಮವೆ ಗತಿಯೊ – ಮಂಕುತಿಮ್ಮ|| 933 ||