ಶೀರ್ಷಿಕೆ – ಬಂಧ ನಿವಾರಣೆ
ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ ಹೊನಲು ನೂರೀ ಬಾಳ ಕಡಲನುಬ್ಬಿಸಲಿ ತನುಬಂಧ ಕಳಚಿ, ಜೀವವಖಂಡಚೇತನದ ಕುಣಿತದಲಿ ಕೂಡಿರಲಿ – ಮಂಕುತಿಮ್ಮ|| 794 ||
ಮೊಳೆವ ಸಸಿಯೊಳು ನಾನು, ತೊಳಗುವಿನನೊಳು ನಾನು ಬೆಳೆವ ಶಿಶುವೊಳು ನಾನು, ಕೆಳೆನೋಟ ನಾನು ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ ಒಳಗೂಡು ವಿಶ್ವದಲಿ – ಮಂಕುತಿಮ್ಮ|| 795 ||
ಸರಿ ಹದದ ಕಾಳು ತಿರೆಯಪ್ಪಿದೊಡೆ ಮೊಳೆಯುವುದು ಹುರಿದೊಡದು ಮೊಳೆಯದರಳಹುದು ಬಾಯ್ಸವಿಗೆ ಪರಮತತ್ವಜ್ಞಾನಿಯೊಡರಿಸುವ ಕರುಮಗಳು ಮರುಬೆಳೆಗೆ ಬಿತ್ತಲ್ಲ – ಮಂಕುತಿಮ್ಮ|| 796 ||
ಸುಟ್ಟ ಹಗ್ಗದ ಬೂದಿ ರೂಪ ಮಾತ್ರದಿ ಬೂದಿ ಗಟ್ಟಿ ಜಗವಂತು ತತ್ವಜ್ಞಾನ ಸೋಕೆ ತೊಟ್ಟಿಹುದು ಲೋಕರೂಪವ, ತಾತ್ವಿಕನ ವೃತ್ತಿ ಕಟ್ಟದವನಾತ್ಮವನು – ಮಂಕುತಿಮ್ಮ|| 797 ||
ನೈರಾಶ್ಯನಿರತಂಗೆ ದೇವತೆಗಳಿಂದೇನು? ವೈರಾಗ್ಯಪಥಿಕಂಗೆ ನಷ್ಟಭಯವೇನು? ಪಾರಂಗತಂಗಂತರಾಳ ದೂರಗಳೇನು? ಸ್ವೈರಪಥವಾತನದು – ಮಂಕುತಿಮ್ಮ|| 798 ||