ಶೀರ್ಷಿಕೆ – ತೃಣ ಸಾಧು
ಅಣಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳದು ಉಣಿಸನೀವನು ದನಕೆ, ತಣಿವನೀವನು ಜಗಕೆ ಗುಣಶಾಲಿ ತೃಣಸಾಧು – ಮಂಕುತಿಮ್ಮ|| 744 ||
ಪರಹಿತದ ಮಾತಿರಲಿ; ಪರರಿನೇ ಜೀವಿಪನು ನರಜಂತು; ಪಶು ಪಕ್ಷಿ ಕೀಟ ಮೀನ್ಗಳವೋಲ್ ಪರರಿನೆಳಸದದೇನನುಂ ಪರರಿಗುಪಕರಿಪ ತರುಜನ್ಮವಲ ಪುಣ್ಯ! – ಮಂಕುತಿಮ್ಮ|| 745 ||
ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ ಪರಧರ್ಮವದೆಲವೊ – ಮಂಕುತಿಮ್ಮ|| 746 ||
ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ ಅವರೆಷ್ಟು ಯಶವಂತರ್ ಎನುವ ಕರುಬಿನಲಿ ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು ಶಿವನಿಗೆ ಕೃತಜ್ಞತೆಯೆ? – ಮಂಕುತಿಮ್ಮ|| 747 ||
ಅನ್ನವುಣುವಂದು ಕೇಳ್ ; ಅದನು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ ಜೀರ್ಣಿಸದ ಋಣಶೇಷ – ಮಂಕುತಿಮ್ಮ|| 748 ||