ಮಂಕುತಿಮ್ಮನ ಕಗ್ಗ (744 ರಿಂದ 748)

ಶೀರ್ಷಿಕೆ – ತೃಣ ಸಾಧು

ಅಣಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳದು ಉಣಿಸನೀವನು ದನಕೆ, ತಣಿವನೀವನು ಜಗಕೆ ಗುಣಶಾಲಿ ತೃಣಸಾಧು – ಮಂಕುತಿಮ್ಮ|| 744 ||

ಪರಹಿತದ ಮಾತಿರಲಿ; ಪರರಿನೇ ಜೀವಿಪನು ನರಜಂತು; ಪಶು ಪಕ್ಷಿ ಕೀಟ ಮೀನ್ಗಳವೋಲ್ ಪರರಿನೆಳಸದದೇನನುಂ ಪರರಿಗುಪಕರಿಪ ತರುಜನ್ಮವಲ ಪುಣ್ಯ! – ಮಂಕುತಿಮ್ಮ|| 745 ||

ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ ಪರಧರ್ಮವದೆಲವೊ – ಮಂಕುತಿಮ್ಮ|| 746 ||

ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ ಅವರೆಷ್ಟು ಯಶವಂತರ್ ಎನುವ ಕರುಬಿನಲಿ ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು ಶಿವನಿಗೆ ಕೃತಜ್ಞತೆಯೆ? – ಮಂಕುತಿಮ್ಮ|| 747 ||

ಅನ್ನವುಣುವಂದು ಕೇಳ್ ; ಅದನು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ ಜೀರ್ಣಿಸದ ಋಣಶೇಷ – ಮಂಕುತಿಮ್ಮ|| 748 ||

Leave a Reply

Your email address will not be published. Required fields are marked *