ಮಂಕುತಿಮ್ಮನ ಕಗ್ಗ (644 ರಿಂದ 648)

ಶೀರ್ಷಿಕೆ – ಆತ್ಮ ಚಿಕಿತ್ಸೆ

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ ಕೊರತೆಯೊಂದನು ನೀನು ನೆನೆನೆನೆದು ಕೆರಳಿ ಧರೆಯಲ್ಲವನು ಶಪಿಸಿ ಮನದಿ ನರಕವ ನಿಲಿಸಿ ನರಳುವುದು ಬದುಕೇನೋ ? ಮಂಕುತಿಮ್ಮ|| 644 ||

ಚಿಂತೆಸಂತಾಪಗಳು ಮನಸಿಗೆ ವಿರೇಚಕವೋ ಸಂತಸೋತ್ಸಾಹಗಳೆ ಪಥ್ಯದುಪಚಾರ ಇಂತುಂಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ ಎಂತಾದೊಡಂತೆ ಸರಿ – ಮಂಕುತಿಮ್ಮ|| 645 ||

ಶೀತವಾತಗಳಾಗೆ ದೇಹಕೌಷಧ ಪಥ್ಯ ಚೇತ ಕೆರಳಿದರೆ ಕಣ್ಣುಕಿವಿಗಳಾತುರದಿಂ ಪ್ರೀತಿಯಿಂದದನೊಲಿಸಿ ನೀತಿಯಲಿ ಶಿಕ್ಷಿಸುವ- ದಾತುಮದ ನೆಮ್ಮದಿಗೆ – ಮಂಕುತಿಮ್ಮ|| 646 ||

ಮುಕ್ತಿಯೆಂಬುದು ಮನದ ಸಂಸ್ಥಿತಿಯೆ, ಬೇರಲ್ಲ ರಕ್ತಿ ವಿಪರೀತವದಕಾಗದಿರೆ ಮುಕ್ತಿ ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ ಶಕ್ತಿವಂತನೆ ಮುಕ್ತ – ಮಂಕುತಿಮ್ಮ|| 647 ||

ತರಿದುಬಿಡು, ತೊರೆದುಬಿಡು,ತೊಡೆದುಬಿಡು ನೆನಹಿಂದ ಕರೆಕರೆಯ ಬೇರುಗಳ, ಮನದ ಗಂಟುಗಳ ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮ್ಮೊರ್ಮೆ ಉರುಳಪ್ಪುದಾತ್ಮಕ್ಕೆ – ಮಂಕುತಿಮ್ಮ|| 648 ||

Leave a Reply

Your email address will not be published. Required fields are marked *