ಶ್ರೀ ಶಂಕರ ಭಗವತ್ಪಾದರು ಮತ್ತು ಅವರ ಶಿಷ್ಯರಿಂದ ರಚಿತವಾಗಿದೆ ಎಂದು ಹೇಳಲಾಗುವ ʼಭಜಗೋವಿಂದಂʼನಲ್ಲಿ ಒಟ್ಟು ೩೦ ಶ್ಲೋಕಗಳಿವೆ. ʼಭಜಗೋವಿಂದಂʼ ಅನ್ನು ʼಮೋಹಮುದ್ಗರʼ ಎಂದು ಕರೆಯುತ್ತಾರೆ. ಮುದ್ಗರ ಎಂದರೆ ಸುತ್ತಿಗೆ. ಮೋಹ ಎಂಬ ಅಜ್ಞಾನವನ್ನು ಜ್ಞಾನ ಎಂಬ ಸುತ್ತಿಗೆಯಿಂದ ಹೊಡೆಯಬೇಕು ಎಂದು ಆದಿಗುರುಗಳು ಕನಿಕರದಿಂದಲೂ, ಗುರುಪ್ರೇಮದಿಂದಲೂ ಹೇಳುತ್ತಿದ್ದಾರೆ. ಒಬ್ಬ ವಯೋವೃದ್ಧರು ವ್ಯಾಕರಣ ಸೂತ್ರವನ್ನು ಬಾಯಿಪಾಠ ಮಾಡುತ್ತಿರುವುದನ್ನು ಕಂಡ ಶ್ರೀ ಶಂಕರರು ಇದಕ್ಕಿಂತ ನಮ್ಮ ವಿಚಾರ ನಾವೇ ತಿಳಿದುಕೊಳ್ಳುವುದು ಮುಖ್ಯ ಎಂದು ಇದರಲ್ಲಿ ತಿಳಿಸುತ್ತಿದ್ದಾರೆ.