ಪದ್ಮ ಪುರಾಣದ ಉತ್ತರಖಂಡದ ಉಮಾಮಹೇಶ್ವರ ಸಂವಾದದ ಗೀತಾ ಮಹಿಮಯಲ್ಲಿ ಶ್ರಿಮದ್ಭಗವದ್ಗೀತೆಯ ಮೊದಲನೆಯ ಅಧ್ಯಾಯದ ಮಹಿಮೆ

ಹಿಂದೆ ಸುಶರ್ಮನೆಂಬುವನೊಬ್ಬನಿದ್ದನು, ಅಯೋಗ್ಯನು, ಪಾಪಿಗಳೊಳಗೆಲ್ಲಾ ಬಹು ಪಾಪಿಯು.  ಇವನ ವಂಶದವರು ವೇದಾಧ್ಯಯನವನ್ನು ಮಾಡಿದವರಲ್ಲ, ಕ್ರೂರಿಗಳು.  ಇಂತಹ ಬ್ರಾಹ್ಮಣರ ವಂಶದಲ್ಲಿ ಇವನು ಹುಟ್ಟಿದನು.  ಧ್ಯಾನಾದಿಗಳು, ಜಪ, ಹೋಮ ಮಾಡುತ್ತಿರಲಿಲ್ಲ.  ಅತಿಥಿ ಪೂಜೆಯಂತೂ ಇಲ್ಲವೇ ಇಲ್ಲ.  ವಿಷಯ ಸುಖದಲ್ಲಿಯೇ ಆಸಕ್ತನಾಗಿ ಕಾಲವನ್ನು ಕಳೆಯುತ್ತಲಿದ್ದನು.  ನೇಗಿಲಿನಿಂದ ಹೊಲವನ್ನು ಉಳುತ್ತಲಿದ್ದನು.  ಎಲೆಗಳ ವ್ಯಾಪಾರದಿಂದಲೂ ಜೀವಿಸುತ್ತಿದ್ದನು.  ಹೆಂಡವನ್ನು ಕುಡಿಯುತ್ತಿದ್ದನು.  ಮಾಂಸವನ್ನು ತಿನ್ನುತ್ತಿದ್ದನು.  ಎಲೆಗಳನ್ನು ತರಲು ಋಷಿಗಳ ಮನೆಯ ಹತ್ತಿರ ಓಡಿಯಾಡುತ್ತಾ ಇದ್ದನು.  ಕಾಲವು ಸಮೀಪಿಸಿದುದರಿಂದ ಹಾವಿನಿಂದ ಕಚ್ಚಲ್ಪಟ್ಟನು.  ಹಾವಿನ ವಿಷವೇರಿ ಸತ್ತುಹೋಗಿ ಅನೇಕವಾದ ನರಕಗಳನ್ನು ಅನುಭವಿಸಿ ಮತ್ತೆ ಮನುಷ್ಯನಾಗಿ ಹುಟ್ಟಿ ಮತ್ತೆ ಸತ್ತು ಕೊನೆಗೆ ಒಂದು ಎತ್ತಾಗಿ ಹುಟ್ಟಿದನು.  ಒಬ್ಬ ಕುಂಟನು ಆ ಎತ್ತನ್ನು ಕುಳಿತುಕೊಂಡು ಸುತ್ತುವುದಕ್ಕೆ ಕೊಂಡುಕೊಂಡನು. ಅವನನ್ನು ಆ ಎತ್ತು ಏಳೆಂಟು ವರ್ಷಗಳವರೆಗೂ ಹೊತ್ತುಕೊಂಡು ಸುತ್ತುತ್ತಿದ್ದಿತು.  ಒಂದು ಸಾರಿ ಆ ಕುಂಟನು ಅದು ಜಾಗ್ರತೆಯಾಗಿ ತಿರುಗುವುದಕೋಸ್ಕರ ಅದರ ತಲೆಯನ್ನು ತಿರುಗಿಸಲು ಅದು ಬಿದ್ದುಬಿಟ್ಟಿತು.  ಏಟನ್ನು ತಡೆಯಲಾರದೆ ಮೂರ್ಛೆಹೊಂದಿತು.  ಆಗ ಆ ಎತ್ತು ಕೈಕಾಲುಗಳನ್ನು ಸಿಕ್ಕಿದಂತೆ ಅಲ್ಲಾಡಿಸುತ್ತಾ ಕಣ್ಣುಗಳನ್ನು ಮರಳಿಸುತ್ತ ನೊರೆಯನ್ನು ಕಕ್ಕುತ್ತಿದ್ದಿತು.  ಈ ರೀತಿಯಾಗಿ ತನ್ನ ಪೂರ್ವಜನ್ಮದ ಪಾಪದಿಂದ ಸಾಯಲಾರದೆಯೂ, ಬದುಕಲಾರದೆಯೂ ಒದ್ದಾಡುತ್ತಿದ್ದಿತು.  ಇದರ ಕಷ್ಟವನ್ನು ನೋಡಲು ಜನಗಳೆಲ್ಲಾ ಗುಂಪುಕೂಡಿದರು.  ಅವರಲ್ಲಿ ಒಬ್ಬ ಪುಣ್ಯಾತ್ಮನು ಅದು ಬದುಕಲೆಂಬುದಾಗಿ ತನ್ನ ಪುಣ್ಯದಲ್ಲಿ ಸ್ವಲ್ಪ ಭಾಗವನ್ನು ಕೊಟ್ಟನು.  ಅಲ್ಲಿ ಎಲ್ಲರೂ ತಮ್ಮ ತಮ್ಮ ಪುಣ್ಯಗಳನ್ನು ಜ್ಞಾಪಿಸಿಕೊಂಡು ಅವುಗಳಲ್ಲಿ ಕೊಂಚ ಕೊಂಚವನ್ನು ಕೊಟ್ಟರು.  ಅವರಲ್ಲಿ ಒಬ್ಬಳು ಲೋಕನಡೆತೆಯನ್ನು ಮೀರದಿರುವ ಸೂಳೆಯಿದ್ದಳು.  ಆ ಸೂಳೆಗೆ ತಾನೇನು ಪುಣ್ಯ ಮಾಡಿದ್ದೇನೆಂಬುದೇ ಗೊತ್ತಿರಲಿಲ್ಲ.  ಆದರೂ ಆಕೆಯು ನಾನು ಮಾಡಿರುವ ಪುಣ್ಯವೇನಾದರೂ ಇದ್ದರೆ ಇದಕ್ಕೆ ಸೇರಲಿ ಎಂಬುದಾಗಿ ಹೇಳಿ ಕೊಟ್ಟಳು.  ಅನಂತರ ಆ ಎತ್ತು ಸತ್ತುಹೋಯಿತು.  ಯಮನ ಆಳುಗಳು ಅದನ್ನು ಎಳೆದುಕೊಂಡು ಹೋದರು.  ಸೂಳೆಯು ಕೊಟ್ಟ ಪುಣ್ಯದಿಂದ ಅವನನ್ನು ಪುಣ್ಯವಂತನೆಂದು ತಿಳಿದು ಯಮನು ಬಿಟ್ಟುಬಿಟ್ಟನು.  ಅನಂತರ ಅವನು ಭೂಲೋಕದಲ್ಲಿ ಕುಲಶೀಲವಂತರಾ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದನು.  ಅವನಿಗೆ ಹಿಂದಿನ ಜನ್ಮದ ಜ್ಞಾನವಿದ್ದಿತು.  ಬಹು ಕಾಲವಾದ ನಂತರ ತನ್ನ ಅಜ್ಞಾನವನ್ನು ನಾಶ ಮಾಡಿ ತನಗೆ ಶ್ರೇಯಸ್ಸನ್ನುಂಟುಮಾಡಿದ ಆ ಪುಣ್ಯವನ್ನು ತಿಳಿಯಲು ಮತ್ತು ಆಕೆಯನ್ನು ನೋಡಲು ಇಷ್ಟಪಟ್ಟನು.  ಆ ಸೂಳೆಯ ಮನೆಗೆ ಹೋಗಿ ಆಕೆಯು ಕೊಟ್ಟುದ್ದ ಧರ್ಮವನ್ನು ಹೇಳಿ ಈ ಧರ್ಮವು ನಿನಗೆ ಬರಲು ಕಾರಣವೇನೆಂದು ಕೇಳಿದನು.  ಆಗ ಆಕೆಯು ಪಂಜರದಲ್ಲಿರುವ ಈ ಗಿಣಿಯು ನಿತ್ಯವೂ ಇದನ್ನು ಹೇಳುತ್ತಿದೆ.  ಅದನ್ನು ಕೇಳುವುದರಿಂದ ನಾನು ಪವಿತ್ರಳಾಗಿದ್ದೇನೆ.  ಆ ಪುಣ್ಯವನ್ನು ನಿನಗೆ ಕೊಟ್ಟಿದ್ದೇನೆ ಎನ್ನಲು ಆಗ ಅವರಿಬ್ಬರೂ ಸೇರಿ ಆ ಗಿಳಿಯನ್ನು ಕೇಳಿದರು.  ಆಗ ಆ ಗಿಳಿಯು ಅದನ್ನು ವಿವರಿಸಲು ಮೊದಲುಮಾಡಿ ತನ್ನ ಜಾತಿಯನ್ನು ತನ್ನ ಸ್ಥಿತಿಯನ್ನು ಜ್ಞಾಪಿಸಿಕೊಂಡು ತನ್ನ ಕಥೆಯನ್ನು ಹೇಳಲು ಮೊದಲು ಮಾಡಿತು.  ಗಿಳಿಯು ಹೇಳಿತು – ನಾನು ಹಿಂದೆ ದೊಡ್ಡ ವಿದ್ವಾಂಸನಾಗಿದ್ದೆನು.  ಆ ವಿದ್ವತ್ತಿನ ಹೆಮ್ಮೆಯಿಂದ ನನಗೆ ವಿವೇಕ ಜ್ಞಾನವು ಹೋಗಿದ್ದಿತು.  ಆದುದರಿಂದ ರಾಗದ್ವೇಷಗಳು ಹೆಚ್ಚಿ ಗುಣಿಗಳಾದ ವಿದ್ವಾಂಸರಲ್ಲಿಯೂ (ಸದ್ಗುಣಿಗಳಲ್ಲಿಯೂ) ಹೊಟ್ಟೆಕಿಚ್ಚು ಪಡುತ್ತಿದ್ದೆನು.  ಹೀಗಿರುತ್ತಿರಲು ಕೆಲವು ಕಾಲದ ಮೇಲೆ ನಾನು ಮೃತನಾದೆನು.  ಅನೇಕವಾದ ನರಕಗಳನ್ನು ಹೊಂದಿ ಅಲ್ಲಿ ಪಾಪಕರ್ಮವನ್ನನುಭವಿಸಿ ಸದ್ಗುರುವನ್ನು ನಿಂದಿಸಿದುರ ಫಲವಾಗಿ ಗಿಳಿಯಾಗಿ ಹುಟ್ಟಿದೆನು.  ಕೆಲವು ಕಾಲವಾಗುತ್ತಲೂ ತಾಯಿತಂದೆಗಳು ನನ್ನನ್ನು ಬಿಟ್ಟು ಬಿಟ್ಟರು. ಆಗ ಒಂದು ದಿನ ಬಿಸಿಲು ಕಾಲದ ಬಿಸಿಲಿನಿಂದ ತೊಂದರೆಪಡುತ್ತಿದ್ದ ನನ್ನನ್ನು ನೋಡಿ ಋಷಿಗಳು ನನ್ನನ್ನು ತೆಗದುಕೊಂಡು ಹೋದರು. ಆ ದೊಡ್ಡ ವಿದ್ವಾಂಸರಿರುವ ಆಶ್ರಮದಲ್ಲಿ ನನ್ನನ್ನು ಪಂಜರದಲ್ಲಿಟ್ಟು ಗೀತೆಯ ಮೊದಲನೆಯ ಆಧ್ಯಾಯವನ್ನು ಆ ಹುಡುಗಳು ಆವೃತಿ ಮಾಡುತ್ತ ಅದನ್ನು ನನಗೂ ಕಲಿಸಿದರು.  ಅದನ್ನು ಆ ಋಷಿಗಳ ಮುಖದಿಂದ ಕೇಳುತ್ತಾ ಬಾಯಿಪಾಠ ಮಾಡಿಕೊಂಡೆನು.  ಇಷ್ಟರಲ್ಲಿ ಒಬ್ಬ ಬೇಡನು ಮೋಸದಿಂದ ಬಲೆಯನ್ನು ಒಡ್ಡಿ ನನ್ನನ್ನು ಹಿಡಿದುಕೊಂಡು ಬಂದು ಈಕೆಗೆ ಮಾರಲು ಈಕೆಯು ಕೊಂಡುಕೊಂಡಳು.  ಇದರಿಂದ ನನ್ನ ಪಾಪವು ಹೋಯಿತು ಎಂದು ಆ ಬ್ರಾಹ್ಮಣನೆಂದುಕೊಂಡನು.  ಈ ಗೀತೆಯ ಮೊದಲನೆಯ ಅಧ್ಯಾಯದಿಂದ ಇವನು ಪಾಪದಿಂದ ಮುಕ್ತನಾದನು ಎಂದು ಸೂಳೆಯು ಎಂದುಕೊಂಡಳು.  ಈ ರೀತಿಯಾಗಿ ತಿಳಿದ ಮೇಲೆ ಆ ಗೀತಾಧ್ಯಾಯದ ಮಹಿಮೆಯನ್ನು ಒಬ್ವರಿಗೊಬ್ಬರು ಹೇಳಿ ಹೊಗಳಿಕೊಳ್ಳುತ್ತಿದ್ದರು.  ಅದೇ ರೀತಿಯಾಗಿ ಅವರು ನಿತ್ಯವೂ ಜಪಿಸುತ್ತಾ ಮುಕ್ತಿಯನ್ನು ಹೊಂದಿದರು.  ಆದುದರಿಂದ ಈ ಗೀತೆಯ ಮೊದಲನೆ ಅಧ್ಯಾಯವನ್ನು ಕೇಳಿದವನೂ, ಹೇಳಿದವನು, ಅಭ್ಯಾಸ ಮಾಡಿದವನೂ ಈ ದಾಟಲು ಅಸಾಧ್ಯವಾದ ಸಂಸಾರ ಸಾಗರವನ್ನು ಸುಖವಾಗಿ ದಾಟುತ್ತಾರೆ.

Leave a Reply

Your email address will not be published. Required fields are marked *